ಮಣಿಕಂಠ ಪೂಜಾರಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆ
ಯಲ್ಲಾಪುರ : ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮದ ಶ್ರೀ ಮಣಿಕಂಠ ಪೂಜಾರಿ ಪೊಲೀಸ್ ಉಪನಿರೀಕ್ಷಕ ಹುದ್ದೆಗೆ ಆಯ್ಕೆಯಾಗಿದ್ದಾರೆಂದು ತಿಳಿದುಬಂದಿರುವುದು ನಾಮಧಾರಿಗಳಿಗೆ ಹೆಮ್ಮೆಯ ವಿಷಯವಾಗಿದೆ. ಆರಕ್ಷಕ ಇಲಾಖೆ ವತಿಯಿಂದ 418 ಪಿಎಸ್ಐಾ ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆಯಲ್ಲಿ 34ನೇ ರಾಂಕ್ ಬರುವ ಮೂಲಕ ಮಣಿಕಂಠರವರು ಆಯ್ಕೆಯಾಗಿದ್ದಾರೆ. ಕೃಷಿ ಕೂಲಿಕಾರರಾದ ಅಣ್ಣಪ್ಪ ಪೂಜಾರಿ ಹಾಗೂ ಚಂದ್ರಕಲಾ ದಂಪತಿಗಳ ಎರಡು ಮಕ್ಕಳಲ್ಲಿ ಹಿರಿಯವನಾದ ಇವರಿಗೆ ಮೊದಲಿನಿಂದಲೂ ಪೊಲೀಸ್ ಇಲಾಖೆಗೆ ಸೇರಬೇಕೆಂಬ ಮಹತ್ವಾಕಾಂಕ್ಷೇ ಹೊಂದಿದ್ದರು. ಮನೆಯಲ್ಲಿ ಎರಡು ಹೊತ್ತು ಊಟಕ್ಕೂ ತೊಂದರೆ ಇದ್ದರೂ ಕೂಡ ಸಾಲ ಮಾಡಿ ಮಗನ ಓದಿಗೆ ಅಡ್ಡಿಯಾಗದಂತೆ ಅಣ್ಣಪ್ಪ ದಂಪತಿಗಳು ನೋಡಿಕೊಂಡಿದ್ದರು.
ಉಮ್ಮಚಗಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 2 ನೇ ತರಗತಿವರೆಗೂ ಓದಿ ನಂತರ ಇವರು ಶಿರಸಿಯ ನಿಲೇಕಣಿಯಲ್ಲಿರುವ ತಮ್ಮ ಅಜ್ಜಿ ಮನೆಯಲ್ಲಿ ಉಳಿದು ವಿದ್ಯಾಭ್ಯಾಸವನ್ನು ಮುಂದುವರೆಸಿದ್ದರು. ಬಿ.ಕಾಮ್. ಪದವಿವರೆಗೂ ಸರಕಾರಿ ಶಾಲಾ ಕಾಲೇಜುಗಳಲ್ಲೇ ವ್ಯಾಸಂಗಮಾಡಿದ ಇವರು ಎಂಇಎಸ್ ಕಾಲೇಜಿನಲ್ಲಿ ಎಂ.ಕಾಂ. ನ ನಾಲ್ಕನೇ ಸೆಮಿಸ್ಟರ್ ನಲ್ಲಿ ಓದುತ್ತಿದ್ದರು. ಪೊಲೀಸ್ ಇಲಾಖೆಯ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಕೆಲವು ವರ್ಷದಿಂದ ಮೈದಾನದಲ್ಲಿ ಬೆವರಿಳಿಸಿ ದೈಹಿಕ ಸಾಮಥ್ರ್ಯ ಹೆಚ್ಚಿಸಿಕೊಂಡಿದ್ದರು ಎನ್ನಲಾಗಿದೆ.